ಕರ್ನಾಟಕ ನಾಯಕರ ಒಕ್ಕೂಟದ ನೇತೃತ್ವದಲ್ಲಿ ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನ ಆರಂಭಿಸಲು ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷರಾದ ರಮೇಶ್ ಹಿರೇಜಂಬೂರು “ನಾಟಕ ಬಿಟ್ಟು ಮೀಸಲಾತಿ ಕೊಡಿ ಅಭಿಯಾನಕ್ಕೆ ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ವಾಲ್ಮೀಕಿ ಯುವ ಸಮುದಾಯ ಸಾಮಾಜಿಕ ಜಾಲ ತಾಣಗಳಲ್ಲಿ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ಶುರು ಹೊರಹಾಕುತ್ತಿದೆ.
ನವರಾತ್ರಿ ದಸರಾ ಶುಭಾಶಯ ಹೇಳುವಲ್ಲಿ ಕೂಡ ನಾಟಕ ಬಿಟ್ಟು ಮೀಸಲಾತಿ ಕೊಡಿ ಅಭಿಯಾನ ಆರಂಭಿಸಿರುವ ಸಮುದಾಯ, ಬಿಜೆಪಿ ಸರ್ಕಾರ ಕೇವಲ ನಮ್ಮನ್ನು ವೋಟ್ ಬ್ಯಾಂಕ್ ರಾಜಕಾರಣಕ್ಕೆ ಬಳಸಿಕೊಳ್ಳುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದೆ.
ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಒಂದೇ ತಿಂಗಳಲ್ಲಿ ಮೀಸಲಾತಿ ಘೋಷಿಸುವುದಾಗಿ ವಾಲ್ಮೀಕಿ ಜಾತ್ರಾ ಮಹೋತ್ಸವದಲ್ಲಿ ವಚನ ನೀಡಿದ್ದರು. ಈಗ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಕೂಡ ಅದೇ ರೀತಿ ಕಾಲಾಹರಣ ಮಾಡದೆ ಅ.20 ರೊಳಗೆ ಮೀಸಲಾತಿ ಘೋಷಿಸಿ ಬಿಜೆಪಿ ಸರ್ಕಾರ ಕೊಟ್ಟ ಮಾತು ಉಳಿಸಿಕೊಳ್ಳಲಿ ಇಲ್ಲದೆ ಹೋದರೆ ಮುಂದಿನ ದಿನಗಳಲ್ಲಿ ರಾಜ್ಯಾದ್ಯಂತ ಉಗ್ರ ಹೋರಾಟ ನಡೆಸಲಾಗುವುದು ಎಂದು ಒಕ್ಕೂಟದ ಸಂಸ್ಥಾಪಕ ರಾಜ್ಯಾಧ್ಯಕ್ಷ ರಮೇಶ್ ಹಿರೇಜಂಬೂರು ಎಚ್ಚರಿಸಿದ್ದಾರೆ.