ತುಮಕೂರು: ಓಮ್ನಿ ಕಾರಿನ ಸಮೇತ ನೀರಿನಲ್ಲಿ ಕೊಚ್ಚಿ ಹೋಗಿದ್ದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ. ತಿಪಟೂರು ತಾಲೂಕಿನ ಗಡಬನಹಳ್ಳಿ ಗ್ರಾಮದ ಪಟೇಲ್ ಕುಮಾರಸ್ವಾಮಿ ಮೃತ ದುರ್ದೈವಿ.
ಮದುವೆ ಸಮಾರಂಭಕ್ಕೆ ಹೋಗುತ್ತಿದ್ದಾಗ ಪಟೇಲ್ ಕುಮಾರಸ್ವಾಮಿ ತುರುವೇಕೆರೆ ತಾಲೂಕಿನ ಕೊಂಡಜ್ಜಿ ಕ್ರಾಸ್ ಬಳಿ ನೀರಿನ ರಭಸಕ್ಕೆ ಕೊಚ್ಚಿ ಹೋಗಿದ್ದರು. ಈ ವೇಳೆ ಕಾರು ಚಲಾಯಿಸುತ್ತಿದ್ದ ಪುಟ್ಟ ಸಿದ್ದಯ್ಯ ಎನ್ನುವವರು ಪ್ರಾಣಪಾಯದಿಂದ ಪಾರಾಗಿದ್ದರು.
ಕಾರಿನ ಸಮೇತ ಕೊಚ್ಚಿ ಹೋಗಿದ್ದ ಪಟೇಲ್ ಕುಮಾರಸ್ವಾಮಿಗಾಗಿ ಎನ್ಡಿಆರ್ಎಫ್, ಅಗ್ನಿಶಾಮಕ ಸಿಬ್ಬಂದಿ ಹಾಗೂ ತುರುವೇಕೆರೆ ಪೊಲೀಸರು ನಾಲ್ಕು ದಿನ ಸತತ ಕಾರ್ಯಾಚರಣೆ ನಡೆಸಿದ್ದರು. ಇಂದು ಘಟನಾ ಸ್ಥಳದಿಂದ ಸುಮಾರು ಅರ್ಧ ಕಿಲೋಮೀಟರ್ ದೂರದಲ್ಲಿ ಮೃತದೇಹ ಪತ್ತೆಯಾಗಿದೆ.