ಬೆಂಗಳೂರು: ರಾಜ್ಯದಲ್ಲಿ ಭ್ರಷ್ಟ ಆಡಳಿತ ವ್ಯವಸ್ಥೆ ಇರುವುದು ಕಳೆದ ಕೆಲವು ದಿನಗಳಿಂದ ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಗೆಯಿಂದಲೇ ಜನರಿಗೆ ಗೊತ್ತಾಗುತ್ತಿದೆ. ಇದೀಗ ಕನ್ನಡ ದಿನ ಪತ್ರಿಕೆ ಪ್ರಜಾವಾಣಿ ಮಾಡಿರುವ ವರದಿಯೊಂದು ಸರ್ಕಾರಿ ಕೆಲಸದ ಹಿಂದಿನ ವಾಸ್ತವವನ್ನು ತೆರೆದಿಟ್ಟಿದ್ದು, ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಪ್ರಜಾವಾಣಿ ವರದಿ ಶೇರ್ ಮಾಡಿಕೊಂಡು ಸರ್ಕಾರ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಸರಣಿ ಟ್ವೀಟ್ ಮಾಡಿರುವ ಮಾಜಿ ಸಿಎಂ ಎಚ್ಡಿಕೆ ಸರಕಾರಿ ನೇಮಕದ ಅಕ್ರಮವನ್ನು ಪ್ರಜಾವಾಣಿ ವರದಿ ಕಣ್ಣಿಗೆ ಕಟ್ಟುವಂತೆ ತೆರೆದಿಟ್ಟಿದೆ. ರಾಜ್ಯ ಸರಕಾರಕ್ಕೆ ಇದಕ್ಕಿಂತ ಸಾಕ್ಷ್ಯ ಬೇಕೆ? ʼಸರಕಾರಿ ಕೆಲಸಗಳ ʼಕಾಸ್ʼಗೀಕರಣʼ ಎಗ್ಗಿಲ್ಲದೆ ನಡೆದಿದೆ ಎನ್ನುವುದು ಇದರಿಂದ ವೇದ್ಯವಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಅಕ್ರಮ, ಸ್ವಜನ ಪಕ್ಷಪಾತ, ಕಳ್ಳಮಾರ್ಗ, ಭ್ರಷ್ಟಾಚಾರಗಳು ತಾಂಡವವಾಡುತ್ತಿವೆ. ಕರ್ನಾಟಕ ಲೋಕಸೇವಾ ಆಯೋಗ, ಕರ್ನಾಟಕ ಪರೀಕ್ಷಾ ಪ್ರಾಧಿಕಾರ, ಪೊಲೀಸ್ ನೇಮಕಾತಿ ಮಂಡಳಿಗಳು ಲಂಚಗುಳಿತನದ ಕೂಪಗಳಾಗಿವೆ. ಪ್ರತಿ ಹುದ್ದೆಗೂ ರೇಟ್ ಫಿಕ್ಸ್ ಮಾಡಿರುವ ರಾಜ್ಯ ಸರಕಾರವು ʼಉದ್ಯೋಗ ವ್ಯಾಪಾರೀಕಣʼವನ್ನೇ ʼಅಧಿಕೃತ ಕಸುಬುʼ ಮಾಡಿಕೊಂಡಿದೆ. ʼಸರಕಾರಿ ಕೆಲಸದ ರೇಟ್ ಕಾರ್ಡ್ʼ ಬಗ್ಗೆ ನಾನು ಪದೆಪದೇ ಹೇಳುತ್ತಲೇ ಇದ್ದೆ. ಕೆಪಿಎಸ್ಸಿ ಹುದ್ದೆಗಳ ʼಮುಕ್ತ ಮಾರಾಟʼದ ಬಗ್ಗೆಯೂ ಹೇಳಿದ್ದೆ. ಆದರೆ, ಸರಕಾರದ್ದು ಜಾಣನಿದ್ದೆ ಎಂದು ಕಿಡಿಕಾರಿದ್ದಾರೆ.