ಬಿ. ಶ್ರೀರಾಮುಲು ಅವರು ಆಗಸ್ಟ್ 8, 1971 ರಂದು ಕರ್ನಾಟಕದ ಬಳ್ಳಾರಿಯಲ್ಲಿ ರೈಲ್ವೆ ಉದ್ಯೋಗಿ ಬಿ. ತಿಮ್ಮಪ್ಪ ಮತ್ತು ಗೃಹಿಣಿ ಬಿ. ಹೊನ್ನೂರಮ್ಮ ದಂಪತಿಗೆ ಜನಿಸಿದರು. ನಾಲ್ಕು ಸಹೋದರರು ಮತ್ತು ನಾಲ್ಕು ಸಹೋದರಿಯರಲ್ಲಿ ಏಳನೇ ಮಗು ಶ್ರೀರಾಮುಲು. ಇವರ ಪತ್ನಿ ಹೆಸರು ಲಕ್ಷ್ಮೀ.
ಬಿಜೆಪಿಯ ಹಿರಿಯ ನಾಯಕಿ ಸುಷ್ಮಾ ಸ್ವರಾಜ್ ಅವರ ಆತ್ಮೀಯ ವಲಯದಲ್ಲಿ ಗುರುತಿಸಿಕೊಂಡ ಶ್ರೀರಾಮುಲು 1999 ರ ವೇಳೆಗೆ ರಾಜಕೀಯ ವಲಯದಲ್ಲಿ ಪ್ರವರ್ಧಮಾನಕ್ಕೆ ಬಂದರು.
1999 ರಲ್ಲಿ ವಿಧಾನ ಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದರಾದರೂ ಕಾಂಗ್ರೆಸ್ಸಿನ ದಿವಾಕರ ಬಾಬು ಅವರ ಎದುರು ಸೋಲು ಅನುಭವಿಸಿದರು. ಆದರೂ ಧೃತಿಗೆಡದ ಅವರು ಮತ್ತೊಮ್ಮೆ ಬಳ್ಳಾರಿಯಿಂದ ಚುನಾವಣೆಗೆ ಸ್ಪರ್ಧಿಸಿ 2004 ರಿಂದ ಸತತ ಮೂರು ಬಾರಿ ಶಾಸಕರಾಗಿ ಜಯಶಾಲಿಯಾದರು.
ಬಿಜೆಪಿಯಲ್ಲಿ ಇರುವಾಗ ಇವರು ಕೆಲ ವಿವಾದಗಳಿಗೆ ಗುರಿಯಾದರು. ನಂತರ ಪಕ್ಷದಲ್ಲಿ ತಮಗೆ ತಾರತಮ್ಯ ಧೋರಣೆ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿ ಪಕ್ಷ ತೊರೆದರು. ಆದಾಗ್ಯೂ 2014ರ ಲೋಕಸಭಾ ಚುನಾವಣೆಯ ವೇಳೆಗೆ ಬಿಜೆಪಿಯೊಂದಿಗಿನ ತಮ್ಮ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಮತ್ತೆ ಪಕ್ಷ ಸೇರ್ಪಡೆಯಾದರು.
ನಂತರ ಬಿಜೆಪಿಯಿಂದಲೇ 2014ರಲ್ಲಿ ಬಳ್ಳಾರಿ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ 16ನೇ ಲೋಕಸಭೆಯ ಸಂಸದರಾಗಿ ಚುನಾಯಿತರಾದರು. 2018ರಲ್ಲಿ ನಡೆದ ಕರ್ನಾಟಕ ವಿಧಾನ ಸಭಾ ಚುನಾವಣೆಯಲ್ಲಿ ಬದಾಮಿ ಕ್ಷೇತ್ರದಿಂದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಸ್ಪರ್ಧಿಸಿ ಸೋತರು. ಆದರೂ ಇದೇ ಚುನಾವಣೆಯಲ್ಲಿ ಮತ್ತೊಂದು ಕ್ಷೇತ್ರ ಮೊಳಕಾಲ್ಮೂರಿನಲ್ಲಿ ಶ್ರೀರಾಮುಲು ಜಯ ಸಾಧಿಸಿದರು. ನಂತರ ಶಾಸಕ ಸ್ಥಾನ ಉಳಿಸಿಕೊಂಡು ಸಂಸದ ಸ್ಥಾನಕ್ಕೆ ರಾಜಿನಾಮೆ ನೀಡಿದರು.