ಬೆಂಗಳೂರು : ಹತ್ಯೆಯಾದ ಹರ್ಷ ತಾಯಿಗೆ ಎಂಎಲ್ಎ ಟಿಕೆಟ್ ಕೊಡುವಂತೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಆರಂಭವಾಗಿದೆ.
ಇತ್ತ ಕಾಂಗ್ರೆಸ್ ಕೂಡಾ ಇದಕ್ಕೆ ತೀಕ್ಷಣವಾಗಿ ಪ್ರತಿಕ್ರಿಯಿಸಿದ್ದು, ಹರ್ಷ ಕುಟುಂಬಕ್ಕೆ ಬಿಜೆಪಿ ಟಿಕೆಟ್ ಕೊಟ್ಟರೆ ಕಾಂಗ್ರೆಸ್ ಅಭ್ಯರ್ಥಿಯನ್ನು ಕಣಕ್ಕೆ ಇಳಿಸುವುದಿಲ್ಲ ಎಂದು ಪರಿಷತ್ ವಿಪಕ್ಷ ನಾಯಕ ಬಿಕೆ ಹರಿಪ್ರಸಾದ್ ಹೇಳಿರುವುದು ಬಿಜೆಪಿಗೆ ಮುಜುಗರ ತಂದಿದೆ.
ದೇಶಕ್ಕಾಗಿ ಹರ್ಷ ಪ್ರಾಣ ತ್ಯಾಗ ಮಾಡಿದ್ದಾನೆ, ಹಾಗಾಗಿ ಸಚಿವ ಕೆಎಸ್ ಈಶ್ವರಪ್ಪ, ಮಾಜಿ ಸಿಎಂ ಯಡಿಯೂರಪ್ಪ ಕುಟುಂಬಕ್ಕೆ ಈ ಬಾರಿ ಟಿಕೆಟ್ ಬೇಡ , ಹರ್ಷ ತಾಯಿಗೆ ಟಿಕೆಟ್ ಕೊಡಿ ಎಂಬ ಕೂಗು ಸಾಮಾಜಿಕ ಜಾಲತಾಣದಲ್ಲಿ ಕೇಳಿ ಬಂದಿದೆ.
‘ಹರ್ಷ ದೇಶಕ್ಕಾಗಿ ಪ್ರಾಣವನ್ನೇ ಕೊಟ್ಟಿದ್ದಾನೆ. ಅವರ ಕುಟುಂಬದವರಿಗೆ ಸಾಂತ್ವನ, ಭಾಷಣ, ಆರ್ಥಿಕ ನೆರವು ನೀಡಿದರಷ್ಟೇ ಸಾಲದು. ಅವರ ತಾಯಿಗೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು. ದೇಶಭಕ್ತನ ಮನೆಯಿಂದ ಒಬ್ಬರು ಎಂಎಲ್ಎ ಹುಟ್ಟಿಬರಲಿ. ಇಂತಹ ಸ್ಥಾನಗಳು ಈಶ್ವರಪ್ಪ, ಯಡಿಯೂರಪ್ಪ ಅವರ ಕುಟುಂಬದವರಿಗಷ್ಟೇ ಮೀಸಲಾಗಬಾರದು. ನಮ್ಮ ಬೇಡಿಕೆ ಈಡೇರಿಸಿದರೆ ಬಿಜೆಪಿಗೊಂದು ಸಲಾಂ’ ಎಂದು ಪೋಸ್ಟರ್ಗಳನ್ನು ಶೇರ್ ಮಾಡಲಾಗುತ್ತಿದೆ.
ವಿಧಾನಪರಿಷತ್ ವಿರೋಧ ಪಕ್ಷ ನಾಯಕ ಬಿ.ಕೆ ಹರಿಪ್ರಸಾದ್ ಅವರು ಖಾಸಗಿ ಮಾಧ್ಯಮ ಒಂದಕ್ಕೆ ಸಂದರ್ಶನ ನೀಡಿರುವ ಹೇಳಿಕೆಯೊಂದು ಭಾರೀ ಚರ್ಚೆಗೆ ಗ್ರಾಸವಾಗಿದೆ.‘ಹರ್ಷನ ಹತ್ಯೆ ಘಟನೆ ಬಳಿಕ ಅವರ ಸಹೋದರಿ ಅಷ್ಟೊಂದು ಚೆನ್ನಾಗಿ ಮಾನವೀಯತೆಯ ದೃಷ್ಟಿಯಿಂದ ಮಾತನಾಡಿದ್ದಾರೆ. ಇನ್ನೊಂದು ಕಡೆ ಹರ್ಷನ ಕುರಿತು ಮಾತನಾಡುವ ಸಚಿವ ಈಶ್ವರಪ್ಪ ಅವರು ಶಿವಮೊಗ್ಗ ವಿಧಾನಸಭೆ ಕ್ಷೇತ್ರದ ಟಿಕೆಟ್ ಅನ್ನು ಹಿಂದುತ್ವಕ್ಕೆ ಪ್ರಾಣ ಬಿಟ್ಟಿರುವ ಹರ್ಷನ ಕುಟುಂಬಕ್ಕೆ ಬಿಟ್ಟು ಕೊಡಲಿ ನಾವು ಅವರ ವಿರುದ್ಧ ಅಭ್ಯರ್ಥಿಯನ್ನು ಹಾಕುವುದಿಲ್ಲ. ಇದು ಸಚಿವ ಈಶ್ವರಪ್ಪಗೆ ನನ್ನ ಸವಾಲು’ ಎಂದು ಹೇಳಿದ್ದಾರೆ.