ಬೆಂಗಳೂರು : ಮಕ್ಕಳಲ್ಲಿ ಸಾಮರಸ್ಯ ಮೂಡಿಸುವ ಹಳೆಯ ಪಠ್ಯ ಪುಸ್ತಕವನ್ನೇ ನೀಡಬೇಕು, ಹೊಸ ಪಠ್ಯವನ್ನ ನೀಡಬಾರದು, ಎಲ್ಲಾ ಧರ್ಮ,ಜಾತಿಗಳನ್ನು ಗೌರವಿಸಬೇಕು, ಇಲ್ಲವೇ ನಾವೇ ಮುಂದೆ ಅಧಿಕಾರಕ್ಕೆ ಬರ್ತೇವೆ, ಆಗ ನಾವೇ ಇದನ್ನ ಬದಲಾವಣೆ ಮಾಡ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ತಿಳಿಸಿದರು.
ಯಾರಿಗೆ ಈ ಪಠ್ಯದಿಂದ ಅಪಮಾನವಾಗಿಲ್ಲ, ನಮಗೆ ಅಧಿಕಾರ, ರಾಜಕಾರಣ ಮುಖ್ಯವಲ್ಲ ಬದಲಾಗಿ ಈ ನಾಡಿನ ಸಂಸ್ಕೃತಿ ಬಹಳ ಮುಖ್ಯ, ಇಂದು ನೀವೆಲ್ಲಾ ಹೋರಾಡುತ್ತಿದ್ದೀರಾ ಅದಕ್ಕೆ ನಾವು ಬೆಂಬಲ ಕೊಡುತ್ತಿದ್ದೇವೆ ಎಂದರು.
ಜೆಡಿಎಸ್ ರಾಜ್ಯಾಧ್ಯಕ್ಷ ಸಿ.ಎಂ ಇಬ್ರಾಹಿಂ ಮಾತನಾಡಿ, ನಾನು ಜೆಡಿಎಸ್ ಪಕ್ಷದವನಾಗಿ ಬಂದಿಲ್ಲ ಅಥವಾ ಮುಸ್ಲಿಂ ವ್ಯಕ್ತಿಯಾಗಿ ಬಂದಿಲ್ಲ ಬದಲಾಗಿ ನಾನು ಬಸವಣ್ಣನವರ ತತ್ವದ ಅನುಯಾಯಿಯಾಗಿಬಂದಿದ್ದೇನೆ ಎಂದರು.
ನಾನು ಮೊದಲೇ ಹೇಳಿದ್ದೆ, ಮುಸ್ಲಿಂ ಜನಾಂಗಕ್ಕೆ ಸಮಸ್ಯೆಯಾದಾಗ ಹೇಳಿದ್ದೆ, ಮುಂದೆ ನಿಮಗೂ ಸಮಸ್ಯೆ ಬರುತ್ತದೆ ಎಂದು ಈಗ ಅಂತಹ ಸಂದರ್ಭ ಒದಗಿಬಂದಿದೆ, ನಾನು ಸಿಎಂ ಬೊಮ್ಮಾಯಿ ಅವರಿಗೆ ಹೇಳುತ್ತೇನೆ, ಕೇಶವಕೃಪಾದಲ್ಲಿ ಹೆಚ್ಚು ದಿನ ಇರೋಕೆ ಆಗಲ್ಲ ಬದಲಾಗಿ ನೀವು ಬಸವಕೃಪಕ್ಕೆ ಬರಬೇಕು ಎಂದು ತಿಳಿಸಿದರು.
ವೇದಿಕೆಯಲ್ಲೇ ಕೆಪಿಸಿಸಿ ಅಧ್ಯಕ್ಷ ಡಿಕೆಶಿಗೆ ಇಬ್ರಾಹಿಂ ಲೇವಡಿ ಮಾಡುತ್ತಾ, ಡಿಕೆಶಿಯವರು ಮುಂದೆ ಬರ್ತೇವೆ ಎಂದಿದ್ದಾರೆ ಒಳ್ಳೆಯದು, ಆದರೆ ನಾನು ಹೇಳುತ್ತೇನೆ, ಮುಂದೆ ಅವರು ಇಲ್ಲ, ಪುಸ್ತಕವೂ ಇರಲ್ಲ, ಕೆಂಪೇಗೌಡರ ವಂಶದವರೇ ಬರ್ತಾರೆ ಎಂದು ಪರೋಕ್ಷವಾಗಿ ಜೆಡಿಎಸ್ ಅಧಿಕಾರಕ್ಕೆ ಬರುತ್ತದೆ ಎಂದು ತಿಳಿಸಿದರು.
ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಮಾತನಾಡಿ, ಗೋಕಾಕ್ ಚಳುವಳಿಯ ಸಂದರ್ಭದಲ್ಲಿ, ನಾಡಿನ ವಿಚಾರದಲ್ಲಿ ಗೊಂದಲವೆದ್ದಿತ್ತು, ಆಗ ವರ ನಟ ಡಾ. ರಾಜ್ ಕುಮಾರ್ ಗೋಕಾಕ್ ಚಳುವಳಿಗೆ ಧುಮುಕಿದರು, ಆಗ ಚಳುವಳಿ ದೊಡ್ಡ ಮಟ್ಟದಲ್ಲಿ ಯಶಸ್ವಿಯಾಯಿತು, ಅಂತಹ ಚಳುವಳಿಗಳು ಇಂದು ನಡೆಯಬೇಕು, ಕುವೆಂಪು ಹೋರಾಟಸಮಿತಿ ಬೆಂಬಲ ಕೋರಿತ್ತು ಆದ್ದರಿಂದ ನಾನು ಅವರನ್ನು ಬೆಂಬಲಿಸಲು ಬಂದಿದ್ದೇನೆ ಎಂದರು.