ಜನವರಿ 31ರಂದು ಮೊದಲ ಬಾರಿಗೆ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಉತ್ತರ ಪ್ರದೇಶದ ಚುನಾವಣೆಯ ವರ್ಚ್ಯುಯಲ್ ರ್ಯಾಲಿ ಉದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಉತ್ತರ ಪ್ರದೇಶದಲ್ಲಿ ಫೆಬ್ರವರಿ 10ರಂದು ಮೊದಲ ಹಂತದ ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಈಗ ಪ್ರಧಾನಿ ಮೋದಿ ಚುನಾವಣಾ ದಿನಾಂಕ ಘೋಷಣೆ ಆದ ಮೇಲೆ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕೆ ಇಳಿದಿದ್ದಾರೆ.
ಮೊದಲ ಹಂತದ ಮತದಾನಕ್ಕೂ ಮುನ್ನ ಮತ್ತೊಂದು ವರ್ಚ್ಯುಯಲ್ ರ್ಯಾಲಿ ಉದ್ದೇಶಿಸಿ ಮಾತನಾಡುವ ಸಾಧ್ಯತೆ ಇದೆ ಎನ್ನುತ್ತವೆ ಬಿಜೆಪಿ ಮೂಲಗಳು. ಮೂರು ರೈತ ವಿರೋಧಿ ಕಾನೂನುಗಳ ಬಗ್ಗೆ ನಡೆದ ರೈತ ಹೋರಾಟದ ಕಾರಣಕ್ಕೆ ಮೊದಲ ಹಾಗೂ ಎರಡನೇ ಹಂತದ ಮತದಾನ ನಡೆಯುವ ಪ್ರದೇಶಗಳಲ್ಲಿ ಬಿಜೆಪಿಗೆ ಭಾರಿ ಹಿನ್ನಡೆ ಆಗಬಹುದು. ಅದೇ ಕಾರಣಕ್ಕೆ ಮೋದಿ ವರ್ಚ್ಯುಯಲ್ ರ್ಯಾಲಿ ಮೂಲಕ ಡ್ಯಾಮೇಜ್ ಕಂಟ್ರೋಲ್ ಪ್ರಯತ್ನ ನಡೆಸಲಿದ್ದಾರೆ ಎಂದು ಹೇಳಲಾಗುತ್ತಿದೆ.
ಬಿಜೆಪಿ ಪಕ್ಷ ಸಾಮಾಜಿಕ ಮಾಧ್ಯಮಗಳಲ್ಲಿ ಸಾಕಷ್ಟು ಪ್ರಬಲವಾಗಿದೆ. ಹಲವು ಚುನಾವಣೆಗಳಲ್ಲಿ ಸಾಮಾಜಿಕ ತಾಣಗಳ ಬಳಕೆ ಮಾಡಿ ಯಶಸ್ವಿಯೂ ಆಗಿದೆ. ಹೀಗಾಗಿ ಬಿಜೆಪಿ ವರ್ಚ್ಯುಯಲ್ ರ್ಯಾಲಿಗಳನ್ನು ನಡೆಸಲು ತಂತ್ರಗಾರಿಕೆ ಆರಂಭಿಸಿದೆ.